ಅರವಿಂದ್ ಕೌಶಿಕ್ ಚಿತ್ರದಲ್ಲಿ ಉರುಡುಗ

ಎರಡನೇ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮೂಲಕ ಸುದ್ದಿಯಲ್ಲಿರುವ ನಟಿ ದಿವ್ಯಾ ಉರುಡುಗ, ಈಗ ಮತ್ತೆ ಅರವಿಂದ್ ಕೌಶಿಕ್ ಚಿತ್ರದಲ್ಲಿ ನಟಿಸಲಿದ್ದಾರೆ.

ʻಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರ ಈಗಾಗಲೇ ಮುಕ್ತಾಯಗೊಂಡಿದೆ. ಅರವಿಂದ್ ಕೌಶಿಕ್ ಈಗಾಗಲೇ ಟೀಸರ್ ಅನಾವರಣ ಮಾಡಿದ್ದಾರೆ. ಅದರಲ್ಲಿ ಹೀರೋ ಯಾರು ಎನ್ನುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಉಳಿಸಿದ್ದಾರೆ. ವಿಜಯದಶಮಿಯ ದಿನ ಹೀರೋ ಇಂಟ್ರಡಕ್ಷನ್ ಟೀಸರ್ ಲೋಕಾರ್ಪಣೆ ಮಾಡಿ, ಅರ್ದಂಬರ್ಧ ಪ್ರೇಮ ಕಥೆಯ ನಾಯಕನಟನನ್ನು ಪರಿಚಯಿಸುವ ಯೋಜನೆ ರೂಪಿಸಿದ್ದಾರೆ.

ಬಕ್ಸಸ್ ಮೀಡಿಯಾ ʻ ಅರ್ದಂಬರ್ಧ ಪ್ರೇಮ ಕಥೆʼ ಚಿತ್ರವನ್ನು ನಿರ್ಮಿಸಿದೆ. ಲೈಟ್ ಹೌಸ್ ಮೀಡಿಯಾ, ಆರ್ ಎ ಸಿ ವಿಷುವಲ್ಸ್ ಕೂಡಾ ನಿರ್ಮಾಣದಲ್ಲಿ ಕೈಜೋಡಿಸಿವೆ. ಸೂರ್ಯ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸವನ್ನೂ ನಿಭಾಯಿಸಿದ್ದಾರೆ.

ರ್ಯಾಪರ್ ಆಲ್ ಓಕೆ ಅಲೋಕ್ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರೂಪಕಿಯಾಗಿ ಹೆಸರು ಮಾಡಿರುವ ಶ್ರೇಯಾ ಬಾಬು, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮೊದಲಾದವರ ತಾರಾಗಣ ಚಿತ್ರಕ್ಕಿದೆ. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟರೊಬ್ಬರು ಈ ಚಿತ್ರದಲ್ಲಿದ್ದಾರೆ. ಇಷ್ಟರಲ್ಲೇ ಅವರು ಯಾರು ಎನ್ನುವ ಮಾಹಿತಿ ಕೂಡಾ ಹೊರಬೀಳಲಿದೆ.

ತುಘ್ಲಕ್, ನಮ್ ಏರಿಯಾಲ್ ಒಂದಿನ ಸಿನಿಮಾಗಳಿಂದ ಹೆಸರು ಮಾಡಿದ ಅರವಿಂದ್ ಕೌಶಿಕ್ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ, ರಚಿತಾರಾಮ್, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಹಲವರು ಇವರ ಮೂಲಕ ಪರಿಚಯ ಆದರು.

ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಸಿನಿಮಾದ ಮೂಲಕ ನಾಯಕಿಯಾಗಿ ದಿವ್ಯಾ ಪರಿಚಯಗೊಂಡಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!