ಪುನೀತ್ ರಾಜ್​ಕುಮಾರ್ ,ವಿಜಯ ರಾಘವೇಂದ್ರ ಅವರಿಂದ ‘ಡಿಯರ್ ಸತ್ಯ’ ಆಡಿಯೋ ರಿಲೀಸ್!

ಪರ್ಪಲ್ ರಾಕ್​ ಎಂಟರ್​ ಪ್ರೈಸಸ್ ಮತ್ತು ವಿಂಟರ್​ ಬ್ರಿಡ್ಜ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾದ ಡಿಯರ್​ ಸತ್ಯ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಓರಾಯನ್​ ಮಾಲ್​ನಲ್ಲಿ ಶನಿವಾರ ನೆರವೇರಿತು. ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅತಿಥಿಗಳಾಗಿ ಆಗಮಿಸಿ ಆಡಿಯೋ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಅಂದಹಾಗೆ p r e ಮ್ಯೂಸಿಕ್​ ಚಿತ್ರದ ಹಾಡುಗಳನ್ನು ಹೊರತಂದಿದೆ.

ಶಿವಗಣೇಶನ್​ ನಿರ್ದೇಶನಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಗಣೇಶ್​ ಪಾಪಣ್ಣ, ರಾಕ್​ಲೈನ್​ ವೆಂಕಟೇಶ್​ ಪುತ್ರ ಯತೀಶ್ ವೆಂಕಟೇಶ್​, ಶ್ರೀನಿವಾಸ್ ಮತ್ತು ಅಜಯ್​ ರಾವ್​ ಬಂಡವಾಳ ಹೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ಆಡಿಯೋ ಬಿಡುಗಡೆ ಮಾಡಿಕೊಂಡಿರುವ ಸಿನಿಮಾ, ಫೆಬ್ರವರಿ ಮಾರ್ಚ್​ ವೇಳೆಗೆ ಬಿಡುಗಡೆ ಮಾಡುವುದು ತಂಡದ ಪ್ಲ್ಯಾನ್​.

ಇನ್ನು ಅತಿಥಿಯಾಗಿ ಆಗಮಿಸಿ ಮಾತನಾಡಿದ ಪುನೀತ್, ‘ಡಿಯರ್ ಸತ್ಯ ಸಿನಿಮಾ ಇದೀಗ ಆಡಿಯೋ ಬಿಡುಗಡೆ ಮಾಡಿಕೊಳ್ಳುತ್ತಿದೆ. ಆದಷ್ಟು ಬೇಗ ಬಿಡುಗಡೆ ಆಗಲಿ. ಒಟ್ಟಿಗೆ ಕುಳಿತು ಸಿನಿಮಾ ನೋಡೋಣ. ಸಂತೂ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಿರ್ಮಾಪಕರಲ್ಲೊಬ್ಬರಾದ ಯತೀಶ್​ ನನ್ನ ತಮ್ಮನಿದ್ದಂತೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎನ್ನುತ್ತ ಸಂಪೂರ್ಣವಾಗಿ ವೈರಸ್ ಹೋಗಿಲ್ಲ. ಸೋಷಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಿ, ಮಾಸ್ಕ್​ ಧರಿಸಿಯೇ ಹೊರನಡೆಯಿರಿ ಎಂದರು ಪುನೀತ್. ಒಂದೊಳ್ಳೆ ಸ್ನೇಹಿತರ ಸಂಘವನ್ನು ಕಟ್ಟಿಕೊಂಡು ಈ ಸಿನಿಮಾ ಸಿದ್ಧವಾಗಿದೆ. ಗೆಳೆಯ ಸಂತೋಷ್​ಗೆ ಇದು ಕನಸಿನ ಕೂಸು. ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಆ ಶ್ರಮಕ್ಕೆ ಸೂಕ್ತ ಮನ್ನಣೆ ಮತ್ತು ಯಶಸ್ಸು ಸಿಗಲಿ. ಕೊರೊನಾ ಹಿನ್ನೆಲೆಯಲ್ಲಿ ನಮ್ಮ ಕಾಳಜಿಯಲ್ಲಿ ನಾವಿರೋಣ ಎಂದರು ವಿಜಯ್ ರಾಘವೇಂದ್ರ.

ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಾಯಕ ಸಂತೋಷ್ ಆರ್ಯನ್. ‘ಹಲಸೂರಿನ ಚಿತ್ರಮಂದರಿದಲ್ಲಿ ಓಂ ಸಿನಿಮಾ ಸಲುವಾಗಿ ಬ್ಲಾಕ್ ಟಿಕೆಟ್​ ಪಡೆದು ಚಿತ್ರ ನೋಡಿದ್ದೆ. ಅವರ ಕೈಯಿಂದ ಈ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಹಲವು ವರ್ಷಗಳ ಹಿಂದೆ ನೂರು ಜನ್ಮಕು ಸಿನಿಮಾದಲ್ಲಿ ನಟಿಸಿದ್ದೆ. ಆ ಚಿತ್ರಕ್ಕೆ ಅಪ್ಪು ಆಗಮಿಸಿ ಹರಸಿದ್ದರು. ಇದೀಗ ಮತ್ತೆ ಅವರ ಆಗಮನವಾಗಿದೆ. ಈ ಸಿನಿಮಾ ನಮ್ಮ ಇಡೀ ತಂಡದ ಮೂರು ವರ್ಷದ ಕನಸು. ಸಿನಿಮಾಕ್ಕೆ ಪಾವನಾ ಜಗದೀಶ್, ಗಣೇಶ್​ ಪಾಪಣ್ಣ, ಶ್ರೀನಿವಾಸ್, ಅಜಯ್​ ರಾವ್, ಯತೀಶ್​ ವೆಂಕಟೇಶ್​ ಆಧಾರ ಸ್ಥಂಭಗಳು. ಇದೀಗ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿದ್ದೇವೆ, ಫೆಬ್ರವರಿ ಯಲ್ಲಿ ಬರಲಿದ್ದೇವೆ’ ಎಂದರು.
ನಾಯಕಿ ಅರ್ಚನಾ ಕೊಟಿಗೆ ಅವರಿಗಿದು ಮೊದಲ ಕಮರ್ಷಿಯಲ್ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಪಾತ್ರದ ಜತೆಗೆ ಒಳ್ಳೇ ಟೀಮ್​ ಸಿಕ್ಕ ಖುಷಿಯಲ್ಲಿದ್ದಾರವರು. ನಟನೆಯಿಂದ ಹಿಡಿದು ಸಿನಿಮಾದ ಎಲ್ಲ ವಿಭಾಗಗಳ ಬಗ್ಗೆಯೂ ಕಲಿತಿದ್ದಾರೆ.
ಇನ್ನು ಆಡಿಯೋ ಬಿಡುಗಡೆ ಸಮಾರಂಭವಾಗಿದ್ದರಿಂದ ಕಾರ್ಯಕ್ರಮದ ಹೀರೋ ಶ್ರೀಧರ್ ವಿ ಸಂಭ್ರಮ್​, ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ‘ಕರೊನಾ ಸಮಯದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿರುವುದೇ ಖುಷಿಯ ವಿಚಾರ. 2021ಕ್ಕೆ ಒಳ್ಳೇ ದಿನಗಳು ಕಾಯುತ್ತಿವೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಮುಂದಿನ ನಿಲ್ದಾಣ ಚಿತ್ರದ ಇನ್ನೂನು ಬೇಕಾಗಿದೆ ಹಾಡಿಗೆ ಸಾಹಿತ್ಯ ಬರೆದಿದ್ದ ಪ್ರಮೋದ್ ಮರವಂತೆ ಈ ಚಿತ್ರದಲ್ಲಿನ ಹಾಡಿಗೂ ಸಾಹಿತ್ಯ ಬರೆದಿದ್ದಾರೆ. ಅದೇ ರೀತಿ ಶ್ವೇತಾ, ಅನುರಾಧಾ ಭಟ್, ಅನಿರುದ್ಧ ಶಾಸ್ತ್ರಿ, ಹೇಮಂತ್, ವಿಹಾನ್ ಹಾಡುಗಳಿಗೆ ಧ್ವನಿ ನೀಡಿ ನನ್ನ ಬಳಗದಲ್ಲಿದ್ದಾರೆ’ ಎಂದು ತಂಡವನ್ನು ಪರಿಚಯಿಸಿದರು ಶ್ರೀಧರ್ ವಿ ಸಂಭ್ರಮ್.
ಅಂತೋಷ್ ಆರ್ಯನ್,. ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್, ಅಶ್ವಿನ್ ರಾವ್​ ಪಲ್ಲಕ್ಕಿ. ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್, ಆದರ್ಶ್​ ಚಂದ್ರಶೇಖರ್ ಇತರರು ಪಾತ್ರವರ್ಗದಲ್ಲಿದ್ದಾರೆ. ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ, ವಿನೋಧ ಭಾರತಿ ಛಾಯಾಗ್ರಹಣ, ಮೋಹನ್ ಮಾಸ್ಟರ್​ ಕೋರಿಯಾಗ್ರಾಫಿ, ಸುರೇಶ್​ ಆರ್ಮುಗಮ್ ಸಂಕಲನ, ಶ್ರೀಧರ್ ವಿ ಸಂಭ್ರಮ ಸಂಗೀತ, ಭಾರ್ಗವಿ ವಿಖ್ಯಾತಿ ಕಾಸ್ಟೂಮ್​ ವಿನ್ಯಾಸ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!