ದರ್ಶನ್ ವಿರುದ್ಧ ದೂರು ದಾಖಲು ಮಾಡಲು ಮನವಿ

ಮೈಸೂರು : ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಸ್ನೇಹಿತರ ಮೇಲೆ ಪೊಲೀಸ್ ದೂರು ದಾಖಲು ಮಾಡುವಂತೆ ಹೈಕೋರ್ಟ್ ವಕೀಲ ಅಮೃತೇಶ್ ಎನ್ನುವವರು ಮೈಸೂರು ಪೊಲೀಸ್ ಕಮಿಷನರ್ ಡಾ. ಚಂದ್ರ ಗುಪ್ತ ಅವರಿಗೆ ದೂರು ನೀಡಿದ್ದಾರೆ.

“ಜನಸಾಮಾನ್ಯರ ಮೇಲೆ ದೂರು ದಾಖಲು ಮಾಡಲು ಪೊಲೀಸರು ಸಾಕಷ್ಟು ಉತ್ಸಾಹ ತೋರುತ್ತಾರೆ. ಆದರೆ ಗಂಭೀರ ಹಲ್ಲೆ ಪ್ರಕರಣ ನಡೆದರೂ ದರ್ಶನ್ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ಎಫ್ ಐ ಆರ್ ದಾಖಲು ಮಾಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಕೂಡಲೇ ದರ್ಶನ್ ಹಾಗೂ ಸ್ನೇಹಿತರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ “ಮನವಿ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ತನಿಖೆ ಶುರು: ದರ್ಶನ್ ಹಲ್ಲೆ ಪ್ರಕರಣ ಸಂಬಂಧ ನರಸಿಂಹ ರಾಜ ವಿಭಾಗದ ಎಸಿಪಿ ಶಶಿಧರ್ ಅವರು ಇಂದು ಖಾಸಗಿ ಹೋಟೆಲ್ ಗೆ ಭೇಟಿ ನೀಡಿ ಹಲ್ಲೆ ನಡೆದಿದೆ ಎನ್ನಲಾದ ಕೊಠಡಿಯನ್ನು ಪರಿಶೀಲನೆ ಮಾಡಿದರು.

ದರ್ಶನ್ ಹೋಟೆಲ್ ಸಪ್ಲೈಯರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್​ ಲಲಂಕೇಶ್ ನಿನ್ನೆ ಆರೋಪಿಸಿರುವ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಸಂಬಂಧ ಎಸಿಪಿ ಶಶಿಧರ್ ಅವರು ಘಟನೆ ನಡೆದ ಹೋಟೆಲ್ ಗೆ ಭೇಟಿ ನೀಡಿ ಹೋಟೆಲ್ ಮಾಲೀಕರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಪೂಜೆ ಮಾಡಲು ಮೈಸೂರಿನ ಫಾರಂ ಹೌಸ್ ಗೆ ನಿನ್ನೆ ರಾತ್ರಿ ದರ್ಶನ್ ಆಗಮಿಸಿದ್ದಾರೆ. ಇಂದು ಮಾಧ್ಯಮದ ಜೊತೆ ದರ್ಶನ್ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!