ರಾಮರಸ

ಕಾರ್ತಿಕ್ ಮಹೇಶ್ ಹುಟ್ಟುಹಬ್ಬಕ್ಕೆ ಕ್ಯಾರೆಕ್ಟರ್ ಪಂಚ್ ಬಿಡುಗಡೆ

ಗುರುದೇಶಪಾಂಡೆ ಅವರು ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್‍ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಅಕ್ಟೋಬರ್ 7, ನಾಯಕ ಕಾರ್ತಿಕ್ ಮಹೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ “ರಾಮರಸ” ಚಿತ್ರತಂಡ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡುವ ಮೂಲಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಕಾರ್ತಿಕ್ ಮಹೇಶ್ ಅವರ ಜೊತೆಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಸಹ ಸ್ಪರ್ಧಿಗಳು “ರಾಮರಸ” ಚಿತ್ರದ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡಿ, ನೆಚ್ಚಿನ ಗೆಳೆಯನಿಗೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಜಿ ಅಕಾಡೆಮಿ”ಯಲ್ಲಿ ನಟನೆ ಕಲಿತಿರುವ ಹದಿನೈದು ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದು, ಇವರ ಜೊತೆಗೆ ನಾಯಕನ ಪಾತ್ರದಲ್ಲಿ ಕಾರ್ತಿಕ್ ಮಹೇಶ್ ಅಭಿನಯಿಸುತ್ತಿದ್ದಾರೆ. “ಬಿಗ್ ಬಾಸ್” ನಿಂದ ಬಂದ ಬಳಿಕ ಅವರನ್ನು ಭೇಟಿಯಾಗಿ ನಮ್ಮ ಚಿತ್ರದ ಕಥೆ ಹೇಳಲಾಯಿತು. ಅವರು ಒಪ್ಪಿಕೊಂಡರು. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ್ದೇವೆ‌. ಮೊದಲು ಸೀಮಿತ ಬಜೆಟ್ ನಲ್ಲಿ ಸಿನಿಮಾ ಮಾಡಬೇಕೆಂದು ಕೊಂಡೆವು. ಈಗ ಬಜೆಟ್ ಹೆಚ್ಚಾಗುತ್ತಿದೆ. ನಿರ್ಮಾಣಕ್ಕೆ ನಮ್ಮ ಜೊತೆಗೆ ವಿಕ್ರಮಾದಿತ್ಯ ಅವರು ಜೊತೆಯಾಗಿದ್ದಾರೆ. ಗಿರಿರಾಜ್ ಅವರ ನಿರ್ದೇಶನ, ಕೆ.ಕೆ ಅವರ ಛಾಯಾಗ್ರಹಣ, ಬಿ.ಜೆ.ಭರತ್ ಅವರ ಸಂಗೀತ ನಿರ್ದೇಶನ‌ ನಮ್ಮ ಚಿತ್ರಕ್ಕಿದೆ. ಮುಂದೆ ಹಂತಹಂತವಾಗಿ ಸಿನಿಮಾ‌ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ ನಿರ್ಮಾಪಕ ಗುರು ದೇಶಪಾಂಡೆ, ಕಾರ್ತಿಕ್ ಅವರಿಗೆ “ರಾಜಹುಲಿ”ಯ ಯಶ್ ಅವರ ಛಾಯೆ ಇದೆ. ಕಾರ್ತಿಕ್ ಸಹ ಯಶ್ ಅವರಂತೆ ಹೆಸರು ಮಾಡಲಿ ಎಂದು ಹಾರೈಸಿದರು.

ಪ್ರಸ್ತುತ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಅಷ್ಟು ಸುಲಭವಲ್ಲ. ಚಿತ್ರ ನಿರ್ಮಾಣ ಮಾಡಲು ಹೆಚ್ಚಿನ ಧೈರ್ಯ ಬೇಕು. ಆ ಧೈರ್ಯವನ್ನು ಗುರು ದೇಶಪಾಂಡೆ ಅವರು ಮಾಡಿ “ರಾಮರಸ” ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆಗೆ ಹದಿನೈದು ಪ್ರತಿಭೆಗಳ ಜೊತೆಗೆ ಹೆಸರಾಂತ ನಟರೊಬ್ಬರು ಬೇಕಿತ್ತು. ಕಾರ್ತಿಕ್ ಮಹೇಶ್ “ಬಿಗ್ ಬಾಸ್” ನಿಂದ ಕನ್ನಡಿಗರ ಮನ ಗೆದ್ದಿದ್ದರು. ಈ ಚಿತ್ರದ ಕೇಳಿ, ಅವರು ಚಿತ್ರದಲ್ಲಿ ಅಭಿನಯಿಸಲು ಶುರುವಾದ ನಂತರ ಕಾರ್ತಿಕ್, ನಮ್ಮನ್ನು ಆವರಿಸಿಕೊಳ್ಳಲು ಶುರುವಾದರು. ಈಗ ಚಿತ್ರ ಬಜೆಟ್ ನಿಂದ ಹಿಡಿದು ಎಲ್ಲಾ ವಿಷಯದಲ್ಲೂ ದೊಡ್ಡದಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇದೆ. ಈ ಸಂದರ್ಭದಲ್ಲಿ ಕಾರ್ತಿಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಒಳಿತನ್ನು ಹಾರೈಸುತ್ತೇನೆ ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್.

ನಾನು ಬೇಡ ಅಂದಿದ್ದೆ. ಆದರೂ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಚರಿಸುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ ಅವರಿಗೆ ಮೊದಲು ಧನ್ಯವಾದ ಹೇಳುತ್ತೇನೆ. ನನ್ನನ್ನು ಹಾರೈಸಲು ಬಂದಿರುವ “ಬಿಗ್ ಬಾಸ್” ಸ್ನೇಹಿತರಿಗೆ ಹಾಗೂ ನಿರ್ದೇಶಕರಿಗೂ ಥ್ಯಾಂಕ್ಯೂ. ಇನ್ನು ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನ ಬಗ್ಗೆ ತುಂಬಾ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆಯನ್ನು ಖಂಡಿತವಾಗಿ ಉಳಿಸಿಕೊಳ್ಳುತ್ತೇನೆ ಎಂದರು ನಾಯಕ ಕಾರ್ತಿಕ್ ಮಹೇಶ್.

ಪ್ರೀತೀಕ ಗುರು ದೇಶಪಾಂಡೆ, ಕಾರ್ಯಕಾರಿ ನಿರ್ಮಾಪಕ ಸುನೀಲ್ ಹೆಚ್ ಸಿ ಗೌಡ, ಛಾಯಾಗ್ರಾಹಕ ಕೆ.ಕೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಮರಸ

Be the first to comment

Leave a Reply

Your email address will not be published. Required fields are marked *

Translate »
error: Content is protected !!