ಕಿರಿಕ್ ಕೀರ್ತಿ ಮೇಲೆ ಹಲ್ಲೆ

ಬಿಗ್ ಬಾಸ್ ರನ್ನರ್ ಅಪ್, ನಟ ಕಿರಿಕ್ ಕೀರ್ತಿ ಅವರ ಮೇಲೆ ಪಬ್‌ ಒಂದರಲ್ಲಿ ಫೋಟೋ ತೆಗೆದ ವಿಚಾರದಲ್ಲಿ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ ನಲ್ಲಿಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಸದಾಶಿವನಗರ ಬಳಿಯ ಹ್ಯಾಮರ್ಡ್​​ ಕ್ಲಬ್​​ನಲ್ಲಿ ಕಿರಿಕ್ ಕೀರ್ತಿ ಹಾಗೂ ಸ್ನೇಹಿತರು ಮದ್ಯಸೇವನೆಯಲ್ಲಿ ತೊಡಗಿದ್ದರು‌. ಈ ವೇಳೆ ಪಕ್ಕದ ಟೇಬಲ್​ನಲ್ಲಿದ್ದ ಮತ್ತೊಂದು ಗುಂಪಿನ ಸದಸ್ಯನೋರ್ವ ಮೊಬೈಲ್​​ನಲ್ಲಿ ಇವರ ಫೋಟೊ ತೆಗೆದಿದ್ದಾನೆ. ಇದನ್ನು ಕೀರ್ತಿ ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹಲ್ಲೆಗೆ ಕಾರಣವಾಗಿದೆ. ಈ ವೇಳೆ ವ್ಯಕ್ತಿ ಬಿಯರ್ ಬಾಟಲಿಯಿಂದ ಕಿರಿಕ್‌ ಕೀರ್ತಿ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ‌‌. ಕೂಡಲೇ ಕಿರಿಕ್ ಕೀರ್ತಿ ಅವರನ್ನು ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ದಾಖಲು ಮಾಡಲಾಯಿತು.

ಘಟನೆ ಬಗ್ಗೆ ಕೀರ್ತಿ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಶೋಧಕಾರ್ಯ ನಡೆಸಿದ್ದಾರೆ.

ಕಿರಿಕ್​ ಕೀರ್ತಿ ಮೇಲೆ 2018ರಲ್ಲೂ ಹಲ್ಲೆ ಮಾಡಲಾಗಿತ್ತು. ಕಿರಿಕ್​ ಕೀರ್ತಿಕಾರಿನಲ್ಲಿ ತೆರಳುತ್ತಿದ್ದಾಗ ಜ್ಞಾನಭಾರತಿ ಕ್ಯಾಂಪಸ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ಗೆ ದಾರಿ ಬಿಡುವಂತೆ ಹಾರನ್ ಹೊಡೆದಾಗ ಪಾನಮತ್ತರಾಗಿದ್ದ ಇಬ್ಬರು ಕೀರ್ತಿ ಮತ್ತು ಅವರ ಗೆಳೆಯನ ಮೇಲೆ ಹಲ್ಲೆ ಮಾಡಿದ್ದರು. ಆಗ ಸಾರ್ವಜನಿಕರು ಪಾನಮತ್ತ ಇಬ್ಬರು ಹಲ್ಲೆಕೋರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

ಕಿರಿಕ್ ಕೀರ್ತಿ ಅವರು ಪತ್ರಕರ್ತರಾಗಿ ಕೆಲಸ ಮಾಡುವ ಜೊತೆಗೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮೀಯ ದೃಶ್ಯಗಳನ್ನು ನಿಜ ಜೀವನದಲ್ಲಿ ಅನುಸರಿಸಲು ಮುಂದಾಗಿರುವ ಈ ಘಟನೆಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!