ಪುನೀತ್ ಗೆ ಅವಮಾನ: ಕ್ಷಮೆ ಕೋರಿದ ರಕ್ಷಿತಾ, ರಚಿತಾ

ಏಕ್ ಲವ್ ಯಾ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ ಪ್ರೇಮ್, ನಟಿ ರಚಿತಾ ರಾಮ್ ಕ್ಷಮೆ ಕೋರಿದ್ದಾರೆ.

ವೇದಿಕೆಯಲ್ಲಿ ಅಪ್ಪು ಫೋಟೋ ಇರಿಸಿ, ಅವರ ಎದುರೇ ಶಾಂಪೈನ್ ಬಾಟಲಿ ಓಪನ್ ಮಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ನಿರ್ದೇಶಕ ಪ್ರೇಮ್ ಮಾಧ್ಯಮಗಳ ಮುಂದೆ ಕ್ಷಮೆ ಕೋರಿದರು.

ಈಗ ರಕ್ಷಿತಾ ಪ್ರೇಮ್, ರಚಿತಾ ರಾಮ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಅವಮಾನಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಹಾಗಿದ್ದರೂ ನಮ್ಮಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದು ಈ ಇಬ್ಬರೂ ಹೇಳಿದ್ದಾರೆ.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಏಕ್ ಲವ್ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ..’ ಆಡಿಯೋ ಬಿಡುಗಡೆ ವೇಳೆ ವೇದಿಕೆಯಲ್ಲಿ ಪುನೀತ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಗಿತ್ತು. ಬಳಿಕ ಅದೇ ವೇದಿಕೆಯಲ್ಲಿ ಚಿತ್ರದ ಹಾಡು ಬಿಡುಗಡೆ ಮುನ್ನ ಶಾಂಪೇನ್ ಬಾಟಲ್ ತೆರೆದು ನಟಿಯರಾದ ರಚಿತಾರಾಮ್, ರಕ್ಷಿತಾ, ಗಾಯಕಿ ಮಂಗ್ಲಿ, ನಿರೂಪಕ ಅಕುಲ್ ಬಾಲಾಜಿ, ರಾಣಾ, ನಿಶ್ವಿಕಾ ನಾಯ್ಡು, ಸಂಭ್ರಮಿಸಿದ್ದರು. ಈ ವರ್ತನೆ ಟೀಕೆಗೆ ಗುರಿಯಾಗಿತ್ತು.

ಪುನೀತ್ ಸಾರಿದ ಆದರ್ಶಗಳಿಗೆ ವಿರುದ್ಧವಾಗಿ ಚಿತ್ರತಂಡ ನಡೆದುಕೊಂಡಿದೆ ಎಂದು ‘ಅಪ್ಪು’ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
“ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ಹೇಗೆ? ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವ ಕೆಲಸ ಮಾಡಬೇಡಿ. ಪುನೀತ್ ಅವರಿಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ” ಎಂದು ನಿರ್ಮಾಪಕ ಸಾ.ರಾ. ಗೋವಿಂದು ಬೇಸರದಿಂದ ಹೇಳಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!