ಮತ್ತೆ ಬೆಳ್ಳಿತೆರೆಯತ್ತ ಅನುಶ್ರೀ

ಭರ್ತಿ ನಾಲ್ಕು ವರ್ಷಗಳ ಬಳಿಕ ನಿರೂಪಕಿ ಅನುಶ್ರೀ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಕರನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅನುಶ್ರೀ ನಟಿಸಲಿದ್ದಾರೆ.

ಪ್ರಭಾಕರನ್ ಹಾಗೂ ಅನುಶ್ರೀ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ‘ಮಮ್ಮಿ ಸೇವ್ ಮೀ’ ಹಾಗೂ ‘ದೇವಕಿ’ ಚಿತ್ರಗಳಿಗೆ ಪ್ರಭಾಕರನ್ ಅಸೊಸಿಯೇಟ್ ಡೈರೆಕ್ಟರ್ ಆಗಿದ್ದರು. ಈ ಹೊಸ ಚಿತ್ರದ ಮೂಲಕ ಪ್ರಭಾಕರನ್ ಸ್ವತಂತ್ರ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ಕೆಲ ದಿನಗಳ ಹಿಂದೆ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿತ್ತು. ಸಿನಿಮಾದ ಶೂಟಿಂಗ್ ಕೆಲ ದಿನಗಳಲ್ಲಿ ಆರಂಭವಾಗಲಿದೆ. ಜನವರಿ ಅಂತ್ಯದಲ್ಲಿ ಸಿನಿಮಾದ ಟೈಟಲ್ ಫಿಕ್ಸ್ ಆಗುವ ಸಾಧ್ಯತೆ ಇದೆ.

” ನಾಲ್ಕು ವರ್ಷಗಳ ನಂತರ ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಚಿತ್ರರಂಗದಿಂದ ದೂರ ಉಳಿದಿರಲಿಲ್ಲ. ಆದರೆ ಆಸಕ್ತಿದಾಯಕ ಕಥೆಗಳು ಬಂದಿರಲಿಲ್ಲ” ಎಂದು ಅನುಶ್ರೀ ಹೇಳಿದ್ದಾರೆ.
ಅನುಶ್ರೀಗೆ ಹೊಸ ಪ್ರಾಜೆಕ್ಟ್ ಬಗ್ಗೆ ಎಕ್ಸೈಟ್ ಆಗಿದ್ದಾರೆ. ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳು ಈ ಚಿತ್ರದಲ್ಲಿ ಇರಲಿವೆ.

ಸಿನಿಮಾದಲ್ಲಿ ಅನುಶ್ರೀ ವಿವಿಧ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಗೋವಾದ ವಿಂಟೇಜ್ ನಲ್ಲಿ ಚಿತ್ರದ ಸಂಪೂರ್ಣ ಶೂಟಿಂಗ್ ನಡೆಯಲಿದೆ. ಹಲವಾರು ಜಾಹೀರಾತುಗಳಲ್ಲಿ ಕೆಲಸ ಮಾಡಿರುವ ನಿರ್ಮಾಪಕ ಕ್ರಿಶ್ ಕೈಮಲ್ ಡಿಓಪಿ ಆಗಿ ಮೊದಲ ಬಾರಿಗೆ ಕೆಲಸ ಮಾಡಲಿದ್ದಾರೆ. ಸಂಗೀತ ನಿರ್ದೇಶಕರನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.

ಜೀ ಟಿವಿಯಲ್ಲಿ ಆಂಕರ್ ಆಗಿ ಖ್ಯಾತಿ ಪಡೆದಿರುವ ಅನುಶ್ರೀ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ತೆರೆಕಂಡ ‘ಭೂಮಿ ತಾಯಿ’, 2012ರ ‘ಬೆಳ್ಳಿ ಕಿರಣ’, 2015ರ ‘ಬೆಂಕಿಪಟ್ಣ’, ‘ರಿಂಗ್ ಮಾಸ್ಟರ್’, ‘ಉತ್ತಮ ವಿಲನ್’, ‘ಮಾದ ಮತ್ತು ಮಾನಸಿ’, ‘ಉಪ್ಪು ಹುಳಿ ಖಾರ’ ಸಿನಿಮಾಗಳಲ್ಲಿ ಅನುಶ್ರೀ ಕಾಣಿಸಿಕೊಂಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!