ಹೇಮಂತ್ ಎಂ ರಾವ್ ನಿರ್ಮಾಣದ ಅಜ್ಞಾತವಾಸಿ ಚಿತ್ರ ಏಪ್ರಿಲ್ 11 ರಂದು ಬಿಡುಗಡೆ ಆಗಲಿದೆ. ಈ ಚಿತ್ರ ಉದ್ದೇಶಪೂರ್ವಕವಾಗಿ ಮೂರು ವರ್ಷ ತಡವಾಗಿ ಬಿಡುಗಡೆಯಾಗುತ್ತಿದ್ದು ಈ ಬಗ್ಗೆ ನಿರ್ಮಾಪಕರು ಉತ್ತರ ನೀಡಿದ್ದಾರೆ.
ಚಿತ್ರ ಬಿಡುಗಡೆಗೆ ಅನುಕೂಲಕರವಾದ ಮಾರುಕಟ್ಟೆ ಇರಲಿಲ್ಲ. ಹೀಗಾಗಿ ಚಿತ್ರವನ್ನು ತಡವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವನ್ನು ಇತರ ಸಿನಿಮಾಗಳಿಂದ ಸಂಪಾದನೆ ಮಾಡಿದ ಹಣದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಇಬ್ಬರು ಹೂಡಿಕೆದಾರರು ಇದ್ದಾರೆ. ಈ ಹಿಂದೆ ಚಿತ್ರವನ್ನು ಖರೀದಿಸಲು ಮತ್ತು ಉತ್ತಮ ಮೌಲ್ಯ ನೀಡಲು ಯಾರು ಸಿದ್ದರಿಲ್ಲದ ಕಾರಣ ಈಗ ಚಿತ್ರ ಬಿಡುಗಡೆ ಆಗುತ್ತಿದೆ. ಹಣವನ್ನು ಕಳೆದುಕೊಳ್ಳಲು ನಾವು ರೆಡಿ ಇರಲಿಲ್ಲ ಎಂದು ನಿರ್ಮಾಪಕ ಹೇಮಂತ್ ಎಂ ರಾವ್ ಹೇಳಿದ್ದಾರೆ.
ಅಜ್ಞಾತವಾಸಿ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜನಾರ್ಧನ್ ಚಿಕ್ಕಣ್ಣ ಅವರು ನಿರ್ದೇಶಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.
ಅಜ್ಞಾತವಾಸಿ ಚಿತ್ರದ ಶೂಟಿಂಗ್ ಮುಗಿದು ಮೂರು ವರ್ಷಗಳು ಕಳೆದಿವೆ. ಚಿತ್ರ ಯಶಸ್ಸು ಕಾಣುವ ದೃಷ್ಟಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡು ನಿರ್ಮಾಪಕರು ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.
ಈಗ ಮಾರುಕಟ್ಟೆ ಸಾಕಷ್ಟು ಸುಧಾರಿಸಿದೆ. ಓಟಿಟಿಗಳು ದೃಢವಾಗಿ ನೆಲೆಯೂರಿವೆ. ಇಲ್ಲಿ ನಿರ್ದಿಷ್ಟ ಮೌಲ್ಯ ದೊರೆಯುವುದಿಲ್ಲ. ಆದರೆ ಜನರು ಚಿತ್ರಮಂದಿರಗಳಿಗೆ ಬರಲು ನಾವು ಒಳ್ಳೆಯ ಸಿನಿಮಾಗಳನ್ನು ಮಾಡುವುದು ಮುಖ್ಯವಾಗುತ್ತದೆ ಎಂದು ಹೇಮಂತ್ ರಾವ್ ಹೇಳಿದ್ದಾರೆ.
___

Be the first to comment