Rajayoga Movie : ಮಹಿಳೆಯರಿಂದ ರಾಜಯೋಗ ಟ್ರೈಲರ್ ಬಿಡುಗಡೆ

ಮಾನವನ ಜೀವನದಲ್ಲಿ ರಾಜಯೋಗ ಎಂಬ ಪದಕ್ಕೆ ಬಹಳ ಮಹತ್ವವಿದೆ. ರಾಜಯೋಗ ಬಂತೆಂದರೆ ಮುಂದೆ ಆತನಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಹಾಸ್ಯನಟ ಪೋಷಕನಟ ಧರ್ಮಣ್ಣ ನಾಯಕನಾಗಿ ನಟಿಸಿರುವ ಚಲನಚಿತ್ರದ ಹೆಸರೂ ಸಹ ರಾಜಯೋಗ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿಶೇಷವಾಗಿ ಇಬ್ಬರು ಸಾಮಾನ್ಯ ಮಹಿಳೆಯರು ಈ ಟ್ರೈಲರ್ ಬಿಡುಗಡೆಗೊಳಿಸಿದರು.

ಲಿಂಗರಾಜ ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಅಡಿ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕ ಲಿಂಗರಾಜು ಮಾತನಾಡುತ್ತ, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ನಾನೂ ಸಹ ಹಳ್ಳಿಯಿಂದ ಬಂದವನು. ದೀಕ್ಷಿತ್ ಕೃಷ್ಣ, ಲಿಂಗರಾಜು ನನ್ನ ಸ್ನೇಹಿತರು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ರಾಮ ರಾಮ ರೇ ಚಿತ್ರದಲ್ಲಿ ದರ್ಮಣ್ಣ ಅವರ ಅಭಿನಯ ನೋಡಿ, ಈ ಚಿತ್ರಕ್ಕೆ ಆಯ್ಕೆ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ನಡುವೆ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಆದರೆ ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಕೊನೆಯಲ್ಲಿ ಮಗನ ಪಾತ್ರದ ಮೂಲಕ ತಂದೆಗೆ ಬುದ್ದಿ ಕಲಿಸುವ ಕಥೆಯಿದೆ. ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ, ಪಾಸ್ಟ್, ಫ್ಯೂಚರ್ ಯೋಚಿಸದೆ, ಪ್ರೆಸೆಂಟ್ ಲೈಫ್ ಬಗ್ಗೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆ. 3 ಹಂತಗಳಲ್ಲಿ 45 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಡಿಐ ನಡೀತಿದೆ ಎಂದು ಹೇಳಿದರು,

ನಾಯಕನಟ ಧರ್ಮಣ್ಣ ಮಾತನಾಡುತ್ತ ನಾನಿಲ್ಲಿ ಕೂರಲು ಕಾರಣ ರಾಮಾ ರಾಮಾ ರೇ ತಂಡ. ಈ ಚಿತ್ರದಲ್ಲಿ ಕಥೆ, ನಿರ್ದೇಶಕ‌ ಇಬ್ಬರೂ ನಾಯಕರು. ನಾನೊಂದು ಪಾತ್ರ ಮಾಡಿದ್ದೇನೆ ಅಷ್ಟೇ. ಈ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಇದೆ, ಈ ಥರದ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಗ್ರಾಮೀಣ ಭಾಗದಲ್ಲಿ ನಡೆಯೋ ಕಥೆಯಲ್ಲಿ ಸಂಬಂಧದ ಮೌಲ್ಯಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ಈ ಸಿನಿಮಾ ನೋಡುವಾಗ ಹಿರಿಯ ನಟರಾದ ಅನಂತನಾಗ್, ಶಶಿಕುಮಾರ್ ಖಂಡಿತ ನೆನಪಾಗ್ತಾರೆ. ಸದ್ಯದಲ್ಲೇ ನಿಮ್ಮ ಮುಂದೆ ಬರುತಗತೇವೆ ಎಂದು ಹೇಳಿದರು. ಚಿತ್ರದ
ನಾಯಕಿಯಾಗಿ ನಿರೀಕ್ಷಾರಾವ್ ನಟಿಸಿದ್ದಾರೆ. ಚಿತ್ರದಲ್ಲಿ ೬ ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಷ್ಣುಪ್ರಸಾದ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ.

ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಒಬ್ಬ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ,

Be the first to comment

Leave a Reply

Your email address will not be published. Required fields are marked *

Translate »
error: Content is protected !!