ಕ್ಷಮೆ ಕೋರಿದ ಅಮೀರ್ ಖಾನ್

ಕೆಜಿಎಫ್ 2 ಚಿತ್ರದ ರಿಲೀಸ್ ದಿನದಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ರಿಲೀಸ್ ಮಾಡುತ್ತಿರುವುದಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಅವರು ಕೆಜಿಎಫ್‍ ನಿರ್ದೇಶಕ ಪ್ರಶಾಂತ್ ನೀಲ್, ಹೀರೋ ರಾಕಿಂಗ್ ಸ್ಟಾರ್ ಯಶ್ ಅವರ ಬಳಿ ಕ್ಷಮೆ ಕೋರಿದ್ದಾರೆ.

ಈ ಬಗ್ಗೆ ಟೆಕ್ಟ್ಸ್ ಮೆಸೇಜ್ ಮಾಡಿ ಕ್ಷಮೆ ಕೇಳಿರುವ ಅಮೀರ್ ಖಾನ್, “ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್‌ ನೀಲ್ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ” ಎಂದಿದ್ದಾರೆ.

“ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಕೆಜಿಎಫ್ ತಂಡಕ್ಕೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ಬೆಂಬಲವಾಗಿ ನಿಂತರು” ಎಂದು ಅಮೀರ್ ಖಾನ್ ಹೇಳಿದ್ದಾರೆ.

ಕೆಜಿಎಫ್‌ 2 ಸಿನಿಮಾ ಎದುರು ತನ್ನ ಸಿನಿಮಾ ನಿಲ್ಲಬಹುದೇ ಎನ್ನುವ ಸಣ್ಣ ಅನುಮಾನದಿಂದ ಅಮೀರ್ ಖಾನ್ ಅವರು ಕೆಜಿಎಫ್‌ 2 ಚಿತ್ರ ಬಿಡುಗಡೆ ದಿನಾಂಕ ಮುಂದೂಡಲು ಸಾಧ್ಯವೇ ಎಂದು ಚಿತ್ರತಂಡದ ಜೊತೆಗೆ ಚರ್ಚೆ ಮಾಡಿದ್ದಾರೆ. ಆದರೆ ಅಂದೇ ಕೆಜಿಎಫ್‌ 2 ಚಿತ್ರ ಬಿಡುಗಡೆ ಆಗಲಿದೆ. ಅಮೀರ್‌ ಖಾನ್‌ ನಟನೆಯ ‘ಲಾಲ್‌ಸಿಂಗ್‌ ಛಡ್ಡಾ’, ಕೆಜಿಎಫ್ 2 ಚಿತ್ರಗಳ ನಡುವೆ ಪ್ರೇಕ್ಷಕ ಯಾವುದನ್ನು ಆರಿಸಿಕೊಳ್ಳಬಹುದು ಅನ್ನುವುದು ಕುತೂಹಲ ಮೂಡಿಸಿದೆ.

ಯಶ್‌ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್‌ 2’ ಏ.14ರಂದು ಥಿಯೇಟರ್‌ನಲ್ಲಿ ಬಿಡುಗಡೆ ಆಗಲಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಕೆಜಿಎಫ್‌ ಚಿತ್ರ ಡಿಸೆಂಬರ್‌ 2018ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿತ್ತು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!