ವಲಸೆ ಕಾರ್ಮಿಕರ ಬದುಕಿನ ಸುತ್ತ ಸಾಗುವ ‘ಪಪ್ಪಿ’ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿಮಾ ಆಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಮೇ 1ಕ್ಕೆ ಬಿಡುಗಡೆ ಆಗಲಿದೆ.
ಉತ್ತರ ಕರ್ನಾಟಕದ ಜವಾರಿ ಸೊಗಡಿನ ಸಂಭಾಷಣೆಯಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬರುವ ಕಾರ್ಮಿಕರ ಬದುಕು ಹಾಗೂ ಇಬ್ಬರು ಬಾಲಕರ ಮುಗ್ಧತೆಯನ್ನು ‘ಪಪ್ಪಿ’ ಟ್ರೈಲರ್ ಅನಾವರಣ ಮಾಡಿದೆ. ಇಲ್ಲಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.
ಆಯುಷ್ ಮಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಹಾಸ್ಯ, ಎಮೋಷನ್ಸ್ ಜೊತೆಗೆ ಗಂಭೀರ ವಿಚಾರವನ್ನು ಹೇಳುವ ಯತ್ನ ಮಾಡಲಾಗಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಹಾಗೂ ಕೊಪ್ಪಳದ ಗುನ್ನಾಳದಲ್ಲಿ 15 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬಾಲ ನಟರಾದ ಪರಶುರಾಮ, ಆದಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಮಾರ್ಚ್ 1ರಿಂದ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಪಪ್ಪಿ’ ಚಿತ್ರವನ್ನು ಕಳುಹಿಸಿಕೊಡಲಾಗಿತ್ತು. ಎರಡು ಗಂಟೆಯ ಚಿತ್ರವನ್ನು ಕೇವಲ ಹತ್ತು ನಿಮಿಷ ನೋಡಿದ ಜ್ಯೂರಿಗಳು ಚಿತ್ರಕ್ಕೆ ಸಿ ಗ್ರೇಡ್ ನೀಡಿ ಮಕ್ಕಳ ಅಭಿನಯ ಮನಮುಟ್ಟುವಂತಿಲ್ಲ ಎಂದು ಷರಾ ಬರೆದರು. ಇದು ನಮಗೆ ಬೇಸರ ತರಿಸಿತು. ಈಗ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
__

Be the first to comment