ಇಂದು ಗೆಲುವಿನ ನಿರೀಕ್ಷೆಯಲ್ಲಿ ಹೊಸ ಕಲಾವಿದರ ಕೆಲ ಚಿತ್ರಗಳು ಬಿಡುಗಡೆ ಆಗಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಎದುರು ನೋಡುತ್ತಿವೆ.
ಚಿಲ್ಲಿ ಚಿಕನ್:
ಬೆಂಗಳೂರಿನ ಚೈನೀಸ್ ಹೋಟೆಲ್ನಲ್ಲಿ ನಡೆಯುವ ಘಟನೆಗಳ ಸುತ್ತ ಸಾಗುವ ಚಿತ್ರವಿದು. ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರು ನಿರ್ಮಿಸಿರುವ ಚಿತ್ರಕ್ಕೆ ಪ್ರತೀಕ್ ಪ್ರಜೋಶ್ ನಿರ್ದೇಶನವಿದೆ.
ಇದು ಹೊಸ ಕಲಾವಿದರಿಂದ ಕೂಡಿದ ಚಿತ್ರ. ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐದು ಹುಡುಗರು ಬೆಂಗಳೂರಿನಲ್ಲಿ ಚೈನೀಸ್ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ ಎಂಬುದೇ ಚಿತ್ರದ ಕಥೆ.
ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ ಮುಂತಾದವರು ತಾರಾಗಣದಲ್ಲಿದ್ದಾರೆ. ಸಿದ್ಧಾಂತ್ ಸುಂದರ್ ಸಂಗೀತ, ಶ್ರೀಶ್ ತೋಮರ್ ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ ಚಿತ್ರಕ್ಕಿದೆ.
ಸಂಭವಾಮಿ ಯುಗೇ ಯುಗೇ:
ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕು ಎಂಬ ಸಂದೇಶ ಹೊತ್ತ ಸಿನಿಮಾ ‘ ಸಂಭವಾಮಿ ಯುಗೇ ಯುಗೇ’. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನಿರ್ಮಿಸಿರುವ ಚಿತ್ರಕ್ಕೆ ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಹೊಸಬರಾದ ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಳ್ಳಿಯ ಹುಡುಗರು ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಹಳ್ಳಿಗಳು ಉಳಿಯುವುದಾದರೂ ಹೇಗೆ ಎಂಬ ಕಥೆ ಚಿತ್ರದಲ್ಲಿದೆ.
ರಮೇಶ್ ಸುರೇಶ್:
ಬಹುತೇಕ ಹೊಸಬರಿಂದ ಕೂಡಿರುವ ‘ರಮೇಶ್ ಸುರೇಶ್’ ಈ ವಾರ ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ. ಆರ್.ಕೆ ಟಾಕೀಸ್ ಲಾಂಛನದಲ್ಲಿ ಪಿ.ಕೃಷ್ಣ ಹಾಗೂ ಬಿ.ಶಂಕರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ ಆಕ್ಷನ್ ಕಟ್ ಹೇಳಿದ್ದಾರೆ.
ಗುಬ್ಬಿ ವೀರಣ್ಣ ಕುಟುಂಬದ ಬೆನಕ ಹಾಗೂ ಯಶು ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕಾಮಿಡಿ ಜಾನರ್ ಚಿತ್ರ. ಚಂದನ ಸೇಗು ಚಿತ್ರದ ನಾಯಕಿ. ಸಾಧು ಕೋಕಿಲ, ಬಹುಭಾಷಾ ನಟ ಸತ್ಯಪ್ರಕಾಶ್, ನೀನಾಸಂ ರಂಗನಾಥ್, ಉಮಾ ಮುಂತಾದವರು ತಾರಾಗಣದಲ್ಲಿದ್ದಾರೆ.
‘ದೇಸಾಯಿ’:
‘ಲವ್ 360’ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಪ್ರವೀಣ್ ಕುಮಾರ್ ತಮ್ಮ ಎರಡನೇ ಪ್ರಾಜೆಕ್ಟ್ ‘ದೇಸಾಯಿ’ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವೀರಭದ್ರೇಶ್ವರ ಫಿಲಂಸ್ ಅಡಿಯಲ್ಲಿ ಮಹಾಂತೇಶ್ ವಿ ಚೋಳದಗುಡ್ಡ ನಿರ್ಮಿಸಿರುವ ಈ ಚಿತ್ರವನ್ನು ನಾಗಿರೆಡ್ಡಿ ಬಾಡ ನಿರ್ದೇಶಿಸಿದ್ದಾರೆ.
ದೇಸಾಯಿ ಮೂರು ತಲೆಮಾರುಗಳನ್ನು ವ್ಯಾಪಿಸಿರುವ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಅಜ್ಜ, ತಂದೆ ಮತ್ತು ಮಗನ ನಡುವೆ ಕಥೆ ನಡೆಯುತ್ತದೆ. ಚಿತ್ರಕ್ಕೆ ಪಿಕೆಎಚ್ ದಾಸ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ ಮತ್ತು ಮಂಜುನಾಥ್ ಹೆಗಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.
‘ಬಹದ್ದೂರ್’:
ಧ್ರುವ ಸರ್ಜಾ ಅಭಿನಯದ ‘ಬಹದ್ದೂರ್’ ಚಿತ್ರ ತೆರೆಕಂಡು 10 ವರ್ಷಗಳಾದ ಬೆನ್ನಲ್ಲೇ ಈ ವಾರ ಸಿನಿಮಾ ಮರುಬಿಡುಗಡೆಗೊಳ್ಳುತ್ತಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದರು. ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರ 2014ರಲ್ಲಿ ಬಿಡುಗಡೆಯಾಗಿತ್ತು.
—–

Be the first to comment