ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್

ಮೀ ಟೂ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಪೊಲೀಸರು, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕೈ ಬಿಟ್ಟಿದ್ದು, ನಟ ಅರ್ಜುನ್ ಸರ್ಜಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

2018ರಲ್ಲಿ ನಟಿ ಶ್ರುತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಈಗ ಅರ್ಜುನ್ ಸರ್ಜಾ ವಿರುದ್ಧದ ಆರೋಪ ಸಾಭೀತಾಗದ ಹಿನ್ನೆಲೆಯಲ್ಲಿ ಸರ್ಜಾ ಕುಟುಂಬಸ್ಥರು ಅರ್ಜುನ್ ಸರ್ಜಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಸ್ವಾಗತಿಸಿದ್ದಾರೆ.

ಅರ್ಜುನ್‌ ಸರ್ಜಾ ಅವರಿಗೆ ಕ್ಲೀನ್ ಚಿಟ್ ದೊರೆತಿರುವ ಬಗ್ಗೆ ಧ್ರುವ ಸರ್ಜಾ, ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಅವರು ಪರೋಕ್ಷವಾಗಿ ಶ್ರುತಿ ಹರಿಹರನ್ ಹಾಗೂ ಅವರನ್ನು ಬೆಂಬಲಿಸಿದವರನ್ನು ವ್ಯಂಗ್ಯವಾಡಿದ್ದಾರೆ.

‘ವಿಸ್ಮಯ’ ಸಿನಿಮಾದ ಚಿತ್ರೀಕರಣ ವೇಳೆ ಅರ್ಜುನ್​ಸರ್ಜಾ ಅವರಿಂದ ಲೈಂಗಿಕ ಕಿರುಕುಳ ಆಗಿತ್ತು ಎಂದು ಶ್ರುತಿ ಹರಿಹರನ್​ ಆರೋಪಿಸಿದ್ದರು. ಅರುಣ್ ​ವೈದ್ಯನಾಥನ್​ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್​ ಮತ್ತು ಅರ್ಜುನ್​ಸರ್ಜಾ ಅವರು ದಂಪತಿಯ ಪಾತ್ರದಲ್ಲಿ ನಟಿಸಿದ್ದರು. ಆಗ ಉಂಟಾದ ವಿವಾದ ಬಗೆಹರಿಸಲು ರೆಬೆಲ್​ಸ್ಟಾರ್​ ಅಂಬರೀಶ್​ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಶ್ರುತಿ ಹರಿಹರನ್‌ ಕಬ್ಬನ್​ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಅರ್ಜುನ್​ಸರ್ಜಾ ವಿರುದ್ಧ ದೂರು ದಾಖಲಿಸಿದ್ದರು.

ಅರ್ಜುನ್ ಸರ್ಜಾ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ, ಲೈಂಗಿಕ ಕಿರುಕುಳ, ಜೀವ ಬೆದರಿಕೆ ಆರೋಪದಡಿ ಕೇಸ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆ ನಡೆಸಿದರೂ ಸೂಕ್ತ ಸಾಕ್ಷ್ಯ ಸಿಗದ ಕಾರಣ ಈಗ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಸದ್ಯ ಶ್ರುತಿ ಹರಿಹರನ್ ಅವರು ಕನ್ನಡದ ‘ಸಾಲಗಾರ’, ‘ಸ್ಟ್ರಾಬೆರಿ’, ‘ಹೆಡ್ ಬುಷ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೇ ವೇಳೆ ಅರ್ಜುನ್ ಸರ್ಜಾ ಅವರು ‘ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಂ’ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಡಿ. 2ರಂದು ರಿಲೀಸ್ ಆಗಲಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!