ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ನಟ ಜಗ್ಗೇಶ್ ಅವರು 1 ಲಕ್ಷ ರೂ. ಬಹುಮಾನ ನೀಡಿದ್ದಾರೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ ಬಳಿಕ ಟ್ವೀಟ್ ಮಾಡಿದ್ದ ಜಗ್ಗೇಶ್ ಅವರು 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಜಗ್ಗೇಶ್ ಅವರು ಈ ಹಿಂದೆ ಘೋಷಣೆ ಮಾಡಿದಂತೆ 1 ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.
”ಮೈಸೂರಿನ ಅತ್ಯಾಚಾರ ಆರೋಪಿಗಳ ಬಂಧಿಸಿದ ಪೋಲಿಸರ ಕಾರ್ಯದಕ್ಷತೆಗೆ ನನ್ನ ವೈಯಕ್ತಿಕ 1 ಲಕ್ಷ ರೂ. ಗಳ ಹಣದ ಚೆಕ್ ನ್ನು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಒಪ್ಪಿಸಿದೆ. ಮೈಸೂರು ಪೋಲಿಸರಿಗೆ ಇರಲಿ ನಿಮ್ಮ ಬೆಂಬಲ ಪ್ರೋತ್ಸಾಹ. ನಮ್ಮ ಮನೆಯ ಹೆಣ್ಣಂತೆ ಅಲ್ಲವೇ ಅನ್ಯಮಕ್ಕಳು ಕೂಡ. ಹರಿಃಓಂ” ಎಂದು ಜಗ್ಗೇಶ್ ಟ್ವೀಟ್ನಲ್ಲಿ ಹೇಳಿದ್ದಾರೆ.
ಈ ಮುನ್ನ ಜಗ್ಗೇಶ್ ಅವರು “ಕಾಲೇಜು ವಿದ್ಯಾರ್ಥಿ ಅತ್ಯಾಚಾರ ಮಾಡಿದ ಕಾಮಪಿಪಾಸುಗಳ ಬಂಧಿಸಿದ ನನ್ನ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. Am proud of my state police. ನನ್ನ ಕಡೆಯಿಂದ ಪ್ರಕರಣ ಬೇಧಿಸಿದ ನಲ್ಮೆಯ ನನ್ನ ಪೋಲಿಸರಿಗೆ 1ಲಕ್ಷ ಬಹುಮಾನ! ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ! ರಾಷ್ಟ್ರಕ್ಕೆ ಮಾದರಿ ನಮ್ಮ ಪೋಲಿಸ್” ಎಂದು ಹೇಳಿದ್ದರು.
ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ಸರ್ಕಾರ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಆದರೆ ಕಡಿಮೆ ಮೊತ್ತ ಸರ್ಕಾರ ನೀಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
_____________





Be the first to comment