ಕನ್ನಡ ಚಿತ್ರೋದ್ಯಮ ತಂಡದಿಂದ “ದಿನಸಿ ಕಿಟ್” ವಿತರಣೆ

ಕಳೆದೊಂದು ವರ್ಷದಿಂದ ಕೊರೋನಾದಿಂದ ಚಿತ್ರರಂಗ ಭಾಗಶಃ ಬಂದ್ ಆಗಿದೆ, ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿದ್ದ ಹಲವಾರು ಕುಟುಂಬಗಳು ಇಂದು ಅಕ್ಷರಶಃ ನಲುಗಿ ಹೋಗಿವೆ , ಅದು ಯಾವ ಮಟ್ಟಕ್ಕೆಂದರೆ ಕೆಲವೊಬ್ಬರು ಒಪ್ಪತ್ತಿನ ಗಂಜಿಗೂ ಪರದಾಡುವ ಪರಿಸ್ಥಿತಿ, ಸ್ವಾಭಿಮಾನದಿಂದ ಬೇರೆಯವರ ಬಳಿ ಸಹಾಯ ಕೇಳಲು ಆಗದೆ ಸಂಕೋಚ ಪಡುತ್ತಾ ಸಂಕಷ್ಟಗಳಲ್ಲಿ ಕಾಲದೂಡುವಂತಾಗಿದೆ, ಹಾಗಂತ ಎಷ್ಟು ದಿನ ಹಸಿವಿನಿಂದ ಬಳಲಲು ಸಾಧ್ಯ ಅದರಲ್ಲೂ ಕೊರೋನಾ ಎರಡನೇ ಅಲೆ ಶುರುವಾದ ಮೇಲಂತೂ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ನಿರ್ಮಾಣವಾಗಿದೆ,

ಇಂಥ ಸಮಯದಲ್ಲಿ ನಮ್ಮ ಬಂಧುಗಳ ಸಹಾಯಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂಬ ಉದ್ದೇಶದಿಂದ “ಕರ್ನಾಟಕ ಚಿತ್ರೋದ್ಯಮ”ದ ಶ್ರೀಯುತರುಗಳಾದ ನಾಗೇಶ್ ಕುಮಾರ್ ಯು .ಎಸ್ , ನಾಗೇಂದ್ರ ಅರಸ್, ಜೆ.ಜೆ.ಶ್ರೀನಿವಾಸ್, ಕುಮಾರ್. ಎಸ್. ರವರು ತಮ್ಮ ಗೆಳೆಯರನ್ನು ಒಗ್ಗೂಡಿಸಿ ಅವರ ಸಹಾಯವನ್ನೊ ಪಡೆದು ಕಳೆದೊಂದು ವರ್ಷದಿಂದ ಅತಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದವರಿಗೆ “ಮೆಡಿಸಿನ್ ಕಿಟ್” ಕರೋನಾ ಪೀಡಿತರ ಉಸಿರಾಟದ ತೊಂದರೆ ಯಾದವರಿಗೆ “ಆಕ್ಸಿಜನ್ ಕಿಟ್” “ದಿನಸಿ ಕಿಟ್” ಮತ್ತು ದೂರದ ಊರುಗಳಿಗೆ ಹೋಗಲಾಗದ ಪರಿಸ್ಥಿತಿ ಬಂದಾಗ ಅವರಿಗೆ ಧನಸಹಾಯ ಮಾಡುತ್ತಾ ಬರುತ್ತಿದ್ದಾರೆ,

ಅದರಂತೆ ಈ ಕರೋನಾ ಎರಡನೆ ಅಲೆಯಲ್ಲಿಯೂ ಸಹ ಸಂಕಷ್ಟದಲ್ಲಿರುವ ಚಿತ್ರೋದ್ಯಮ ಬಂಧುಗಳಿಗಾಗಿ 1000, ( ಒಂದು ಸಾವಿರ ) ದಿನಸಿ ಕಿಟ್ ಗಳನ್ನು ಕೊಡುವ ಗುರಿ ಹಮ್ಮಿಕೊಂಡಿದ್ದಾರೆ, ಈಗಾಗಲೇ ಈ ಕಾರ್ಯ ಶುರುವಾಗಿದ್ದು ನೇರ ಸಂತ್ರಸ್ಥರಿಗೆ ಕರೆ ಮಾಡಿ ಅವರಿಗೆ ಕಿಟ್ ತಲುಪಿಸುವ ವ್ಯವಸ್ಥೆ ಆಗುತ್ತಿದೆ ಇಂತಹ ಸಂಕಷ್ಟ ಸಮಯದಲ್ಲಿ ಈ ನಾಲ್ವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಚಿತ್ರೋದ್ಯಮದ ಮಂದಿ ಹಾರೈಕೆಯ ಮಾತನಾಡಿಕೊಳ್ಳುತ್ತಿದ್ದಾರೆ. ನಿಮ್ಮ ಕಾರ್ಯ ಹೀಗೆ ಸಾಗಲಿ ಆ ದೇವರು ನೊಂದವರಿಗೆ ಸ್ಪಂದಿಸುವ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದು ಹಾರೈಸುತ್ತೇವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!