“ನಿಮ್ಮೂರು” ಚಿತ್ರದ ಆಡಿಯೋ ಬಿಡುಗಡೆ

ಕರೋನಾ ಬಂದು ಇಡೀ ಜಗತ್ತೇ ತತ್ತರಿಸಿದೆ. ವರ್ಷವಾಗತಾ ಬಂದರೂ ಜನ ಥಿಯೇಟರಿಗೆ ಬರ್ತಿಲ್ಲ. ಆದರೆ ಹೊಸ ಚಿತ್ರಗಳ ನಿರ್ಮಾಣ, ಆಡಿಯೋ ಬಿಡಗಡೆ ಕಾರ್ಯಕ್ರಮ ನಡೆಯುತ್ತಲೇ ಇದೆ. ಈಗ ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ನಿಮ್ಮೂರು ಎನ್ನುವ ಚಲನಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.

ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ್ರು ಹಾಗೂ ಯುವನಟಿ ರೂಪಿಕಾ, ಭಾಮ ಹರೀಶ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹೊಸಬರೇ ಸೇರಿಕೊಂಡು ಈ ಚಿತ್ರ ಮಾಡಿದ್ದೀರಿ, ಇದೇ ಖುಷಿ ಸಿನಿಮಾ ಬಿಡುಗಡೆಯಾದ ಮೇಲೂ ಇರಲಿ ಎಂದು ಚಿನ್ನೇಗೌಡ್ರು ಹೇಳಿದರೆ, ಚಿತ್ರ ಬಿಡುಗಡೆ ಮಾಡುವಾಗ ಒಳ್ಳೇ ವಿತರಕರನ್ನು ಇಟ್ಟುಕೊಳ್ಳಿ, ಅವರು ಯಾವರೀತಿ ಹೋಗಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ. ಸಿನಿಮಾನ ಹೇಗೋ ಮಾಡಬಹುದು, ರಿಲೀಸ್ ಮಾಡುವುದು ತುಂಬಾ ಕಷ್ಟವಾಗಿಬಿಡುತ್ತೆ ಎಂದು ಹೇಳಿದರು.

ಕಳೆದ ಐದಾರು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ವಿಜಯ್ ಎಸ್. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ರಾಜಶೇಖರ ಚಂದ್ರಶೇಖರ್ ಡಾವಣಗೇರಿ(ರಾಣೆಬೆನ್ನೂರು) ಈ ಚಿತ್ರದ ನಿರ್ಮಾಪಕರು.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸಿನಿಮಾ ಚಿತ್ರದಲ್ಲಿ ಲಕ್ಕಿರಾಮ್ ಹಾಗೂ ವೀಣಾಗಂಗಾಮ್ ನಾಯಕ, ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಿರ್ಮಾಪಕ ರಾಜಶೇಖರ್ ಅವರು ಒಂದು ನೆಗೆಟಿವ್ ಪಾತ್ರ ನಿರ್ವಹಿಸಿದ್ದಾರೆ.

ನಿರ್ಮಾಪಕರ ಬ್ಯಾನರ್ ಹೆಸರು ಹಠವಾದಿ ಸಿನಿ ಕ್ರಿಯೇಶನ್ಸ್, ನಿರ್ಮಾಪಕರು ರವಿಚಂದ್ರನ್ ಅಭಿಮಾನಿ, ಜೀವನದಲ್ಲಿ ಸಾಧಿಸುವ ಹಠ ಇರಬೇಕು, ಆಗಲೇ ನಾವೇನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದು ನಿರ್ಮಾಪಕರ ಸ್ಪಷ್ಟನೆ. ನಿಮ್ಮೂರು ಎಂದಾಗ ಎಲ್ಲರಿಗೂ ಅವರವರ ಊರಿನ ನೆನಪಾಗಬೇಕು ಎನ್ನುವ ಉದ್ದೇಶದಿಂದ ಈ ಟೈಟಲ್ ಇಟ್ಟಿದಾರೆ.

ನಿಮ್ಮೂರು ಎಂದಾಕ್ಷಣ ಅಲ್ಲಿ ನಡೆದ ಘಟನೆ ನೆನಪಾಗಬೇಕು, ಇಂಪ್ಯಾಕ್ಟ್ ಆಗಬೇಕು ಎನ್ನುವುದು ಇದರ ಉದ್ದೇಶ. ಚಿತ್ರವನ್ನು ನಾವೆಲ್ಲ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಒಂದು ಹಳ್ಳಿ ಎಂದಮೇಲೆ ಅಲ್ಲಿ ಸಾಮಾನ್ಯವಾಗಿರುವ ಒಂದು ಪ್ರೀತಿ, ರಾಜಕೀಯ, ರೈತರ ಸಮಸ್ಯೆಗಳು ಇದನ್ನೆಲ್ಲ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇದರ ಜೊತೆಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ ಎಂದು ಹೇಳಿದರು.

ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ವಿಜಯ್ ನಿಮ್ಮೂರು ಎಂದಾಕ್ಷಣ ಚಿತ್ರ ನೋಡುತ್ತಿರುವ ಎಲ್ಲರಿಗೂ ಅವರವರ ಹುಟ್ಟೂರು ನೆನಪಾಗುತ್ತದೆ. ನಿರ್ಮಾಪಕರು ನನ್ನ ಸ್ನೇಹಿತರು. ಈ ಕಥೆ ರೆಡಿ ಮಾಡಿಕೊಂಡು ಯಾರಬಳಿ ಮಾಡಿಸುವುದೆಂದು ಯೋಚಿಸುತ್ತಿದ್ದಾಗ ಇವರು ಸಿಕ್ಕರು.

ಒಳ್ಳೇ ಸ್ಟೋರಿ ಚಿತ್ರದಲ್ಲಿದೆ. 3 ಫೈಟ್, 5 ಹಾಡುಗಳು ಚಿತ್ರದಲ್ಲಿವೆ, ಕೊಳ್ಳೇಗಾಲ, ಹಾಸನ, ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗ ಸೇರಿ 76 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಒಂದು ನೈಜಘಟನೆ ಆಧರಿಸಿ ಮಾಡಿದ ಕಥೆಯಿದು, ನೇಟಿವಿಟಿಗೆ ತುಂಬಾ ಹತ್ತಿರವಾದಂಥ ಪಾತ್ರಗಳನ್ನಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇವೆ.

ಎಲ್ಲಾ ಥರದ ಮನರಂಜನಾತ್ಮಕ ಅಂಶಗಳಿರುವ ಟೋಟಲ್ ಎಂಟರ್‍ಟೈನ್‍ಮೆಂಟ್ ಪ್ಯಾಕೇಜ್ ಇದು. ಲಕ್ಕಿರಾಮ್ ಚಿತ್ರದ ನಾಯಕನಾಗಿದ್ದು, ವೀಣಾ ಗಂಗಾಧರ್ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸಮಾರಂಭದಲ್ಲಿ ಅತಿಥಿಯಾಗಿದ್ದ ಆನಂದ ಪಾಟೀಲ ಹುಲಿಕಟ್ಟಿ ಮಾತನಾಡುತ್ತ ನಿಮ್ಮೂರಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು, ಚಿತ್ರದಲ್ಲಿ ರೈತರ ಬಗ್ಗೆ ಹೇಳಿದ್ದೀರಿ, ಇನ್ಮುಂದೆಯೂ ಸಹ ಪ್ರತಿ ಚಿತ್ರದಲ್ಲಿ ರೈತರ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವಂತಾಗಲಿ ಎಂದು ಸಲಹೆ ನೀಡಿದರು. ಚಿತ್ರೀಕರಣ ಸಮಯದಲ್ಲಿ ಸಹಕಾರ ನೀಡಿದ ಗ್ರಾಮಸ್ಥರಿಗೆ ನಿರ್ಮಾಪಕರು ವೇದಿಕೆಗೆ ಕರೆದು ಸನ್ಮಾನಿಸಿದರು.

ಇನ್ನು ಚಿತ್ರದ ಸಂಗೀತ ನಿರ್ದೇಶಕರಾಗಿ ಮಧುಸೂದನ್ ಡಿ. ಅಭಿನಂದನ್ ಕಷ್ಯಪ್ ಕೆಲಸ ಮಾಡಿದ್ದಾರೆ. ವಿ.ಪಳನಿವೇಲು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನವಳ್ಳಿ, ಸಿದ್ದು ಮಂಡ್ಯ, ಮಂಜುನಾಥ್ ಹಾಗೂ ಇತರರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!