100 CRORES ಸಿನಿಮಾ ಪೋಸ್ಟರ್ ಲಾಂಚ್​ ಮಾಡಿದ ಸಿಂಪಲ್ ಸುನಿ

ಎಸ್​ಎಸ್​ ಸ್ಟುಡಿಯೋಸ್ ಮತ್ತು ವಿಷನ್​ ಸಿನಿಮಾಸ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 100 CRORES ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿದೆ. ಸ್ಯಾಂಡಲ್​ವುಡ್​ನ ಸಿಂಪಲ್ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆ ದಿನಗಳು ಖ್ಯಾತಿಯ ಚೇತನ್​ ಅಹಿಂಸಾ ಈ ಸಿನಿಮಾದಲ್ಲಿ ನಾಯಕನಾಗಿದ್ದು, ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಿದ್ದಾರೆ.

ಮೂಲತಃ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಪಕರಾಗಿಯೂ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ ಗಣೇಶ್​ ನಟಿಸುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ ಹಾಗೂ ಈ ಹಿಂದೆ ಕನ್ನಡದ ಕೆಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

100 CRORES ಚಿತ್ರದ ಬಗ್ಗೆ ಮಾಹಿತಿ ನೀಡುವ ಅವರು, ಈಗಾಗಲೇ ತೆಲುಗಿನಲ್ಲಿ 75ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಈ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತಯಾರಾಗಿದ್ದು, ವಿರಾಟ್ ಚಕ್ರವರ್ತಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಹೇಳಿದಂತೆ ನೂರು ಕೋಟಿಯ ಹಿಂದೆಯೇ ಈ ಸಿನಿಮಾ ಸಾಗಲಿದ್ದು, ಪಕ್ಕಾ ಆ್ಯಕ್ಷನ್​ ಅವತಾರದಲ್ಲಿ ಚೇತನ್​ ಅವರು ಕಾಣಿಸಿಲಿದ್ದಾರೆ ಎಂದರು ನಿರ್ಮಾಪಕ ಸಾಯಿ ಕಾರ್ತಿಕ್​.

ಇನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಂಪಲ್ ಸುನಿ ಸಿಂಪಲ್​ ಮಾತುಗಳನ್ನಾಡಿದರು. ಚೇತನ್ ಅವರ ಆಚಾರ ವಿಚಾರ ನೋಡಿದರೆ, ಅವರು ನಟನೆ ಜತೆಗೆ ನಿರ್ದೇಶನಕ್ಕೂ ಬರಬೇಕೆಂಬುದು ನಮ್ಮ ಬಯಕೆ. ಅವರ ವಿಚಾರಗಳನ್ನು ಸಿನಿಮಾದಲ್ಲಿ ಪ್ರಸ್ತುತಪಡಿಸಿದರೆ, ಅದಕ್ಕೆ ಮತ್ತಷ್ಟು ಮೈಲೇಜ್ ಸಿಗುತ್ತಿತ್ತು. 100 CRORES ಚಿತ್ರದ ಪೋಸ್ಟರ್ ಅಷ್ಟೇ ರೋಚಕವಾಗಿದೆ. ಪೋಸ್ಟರ್​ನಲ್ಲಿರುವ 100ಕೋಟಿ ಸಿನಿಮಾ ತಂಡಕ್ಕೂ ದಕ್ಕಲಿ ಎಂಬುದು ನನ್ನ ಹಾರೈಕೆ ಎಂದರು.

ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್​ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್ ಎಂದರು ಚಿತ್ರದ ನಾಯಕ ಚೇತನ್ ಅಹಿಂಸಾ.
ಒಂದು ಐಟಂ ಹಾಡು ಮತ್ತೊಂದು ಥೀಮ್ ಹಾಡು ಚಿತ್ರದಲ್ಲಿ ಇರಲಿದ್ದು, ರೊಮ್ಯಾಂಟಿಕ್​ ಹಾಡುಗಳು ಈ ಸಿನಿಮಾದಲ್ಲಿಲ್ಲ ಎಂದರು ನಿರ್ಮಾಪಕ ಸಾಯಿ ಕಾರ್ತಿಕ್. ಕರ್ನಾಟಕ ಸೇರಿ ಹೈದರಾಬಾದ್​ನಲ್ಲಿ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಚೇತನ್ ಮತ್ತು ಹ್ಯಾಪಿಡೇಸ್ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದರೆ, ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್​ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ.
ಸಾಯಿ ಕಾರ್ತಿಕ್ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರಾದರೆ, ನಾಗಂ ತಿರುಪತಿ ರೆಡ್ಡಿ ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರಾಗಿದ್ದಾರೆ. ಸಿಂಪಲ್ ಸುನಿ, ತ್ರಿಬಲ್ ರೈಡಿಂಗ್ ಸಿನಿಮಾ ನಿರ್ಮಾಪಕ ರಾಮ್​ಗೋಪಾಲ್ ಮತ್ತು ನಿರ್ದೇಶಕ ಮಹೇಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹೈದರಾಬಾದ್​ನಲ್ಲಿ ಸಂಕಲನ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನಿರ್ದೇಶಕ ವಿರಾಟ್ ಚಕ್ರವರ್ತಿ ಸುದ್ದಿಗೋಷ್ಠಿಗೆ ಆಗಮಿಸಿರಲಿಲ್ಲ. ಅಂದಹಾಗೆ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ತಂಡ ಸದ್ಯದಲ್ಲೇ ಘೋಷಣೆ ಮಾಡಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!